ಸಿದ್ದರಾಮಯ್ಯ ಸಿಎಂ ಆದ್ರೂ ಉಚಿತ ಬಿತ್ತನೆ ಬೀಜ, ಗೊಬ್ಬರ ಕೊಡಲು ಸಾಧ್ಯವಿಲ್ಲ! | ಜನತಾ ನ್ಯೂಸ್
ಬೆಂಗಳೂರು : ರೈತರಿಗೆ ಉಚಿತ ಬಿತ್ತನೆ ಬೀಜ, ರಸಗೊಬ್ಬರ ನೀಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದರು, ಈ ಬೇಡಿಕೆಯನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ತಳ್ಳಿ ಹಾಕಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದರೆ ಉಚಿತವಾಗಿ ನೀಡುತ್ತಿದ್ದರಾ? ರೈತರ ಅನುಕೂಲಕ್ಕಾಗಿ ಏನು ಮಾಡಬೇಕೋ ಅದನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಸಂಪೂರ್ಣ ಉಚಿತ ಕೊಡಲು ಸಾಧ್ಯವಿಲ್ಲ. ಇದು ಅವೈಜ್ಞಾನಿಕ ಎಂದು ಬಿ. ಸಿ. ಪಾಟೀಲ್ ಹೇಳಿದರು.
ಉಚಿತ ಬಿತ್ತನೆ ಬೀಜ, ರಸಗೊಬ್ಬರ ಕೊಡಲು ಸಾಧ್ಯವಾ? ಸಿದ್ದರಾಮಯ್ಯ ಸಿಎಂ ಆದರೂ ಇದು ಸಾಧ್ಯವಾಗುತ್ತಾ? ಅವರು ಕೇಳುತ್ತಿರುವುದು ಅವೈಜ್ಞಾನಿಕ. ನಾವು ಸಬ್ಸಿಡಿ ದರದಲ್ಲಿ ಕೊಡುತ್ತಿದ್ದೇವೆ. ಯೂರಿಯಾ ಖರೀದಿಗೆ 1265 ಕ್ಕೆ 1000 ರೂ. ಸಬ್ಸಿಡಿ ಕೊಡುತ್ತಿದ್ದೇವೆ. ಸೂಕ್ಷ್ಮ ನೀರಾವರಿಗೆ ಶೇ. ೯೦ ಸಬ್ಸಿಡಿ ನೀಡುತ್ತಿದ್ದೇವೆ. ಕೃಷಿ ಸನ್ಮಾನ್ ಯೋಜನೆ ಅನುಷ್ಠಾನದಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
240 ಅಕ್ರಮ ಮಾರಾಟಗಾರರ ಲೈಸೆನ್ಸ್ ರದ್ದುಪಡಿಸಿದ್ದೇವೆ ಎಂದು ಪಾಟೀಲ್ ಹೇಳಿದರು. ಈಗ ನ್ಯಾನೋ ಯೂರಿಯಾ ಬಂದಿದೆ. ಅರ್ಧ ಲೀಟರ್ ಗೆ 250 ರೂ. ಬೀಳಲಿದೆ. ಇದು ಒಂದು ಚೀಲ ಯೂರಿಯಾ ಗೊಬ್ಬರಕ್ಕೆ ಸಮ ಎಂದು ತಿಳಿಸಿದರು.
ಕಳೆದ ವರ್ಷ ಲಾಕ್ಡೌನ್ ಇದ್ದರೂ ಕೃಷಿ ಉತ್ಪಾದನೆ ಚೆನ್ನಾಗಿ ನಡೆದಿತ್ತು. 153 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಈ ವರ್ಷವೂ ಉತ್ತಮ ಬಿತ್ತನೆಯಾಗಿದೆ. ಕೃಷಿ ಉತ್ಪಾದನೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದ ಸಚಿವ ಪಾಟೀಲ್, ಕಳೆದ ಬಾರಿ ತರಕಾರಿಗಳು ಸಿಗುತ್ತಿರಲಿಲ್ಲ. ಆದರೆ, ಈ ಬಾರಿ ಕೈಗಾಡಿಯಲ್ಲಿ ಮಾರಲು ಅವಕಾಶ ಕೊಡಲಾಗಿದೆ. ಹಾಗಾಗಿ ತರಕಾರಿ ಈ ಬಾರಿ ನಷ್ಟವಾಗಿಲ್ಲ ಎಂದರು.
ಈ ವರ್ಷ ಮುಂಗಾರು ಹಂಗಾಮಿನಲ್ಲಿ 2.10 ಕೋಟಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ರೈತರಿಂದಲೇ ಅವರ ಜಮೀನಿನ ಬೆಳೆ ಮಾಹಿತಿಯನ್ನು ಆಪ್ ಮೂಲಕ ಅಪ್ ಲೋಡ್ ಮಾಡಿಸುವ ಉದ್ದೇಶವನ್ನು ಕೃಷಿ ಇಲಾಖೆ ಹೊಂದಿದೆ. 2020-21 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 5.01 ಲಕ್ಷ ಟಾರ್ಪಾಲಿನ್ ವಿತರಣೆ ಮಾಡಲಾಗಿದೆ ಎಂದು ಕೃಷಿ ಸಚಿವರು ಹೇಳಿದರು.
ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ, ಕೊರತೆ ಇದ್ದರೆ ಅದನ್ನು ಸರಿಪಡಿಸಲು ಸರ್ಕಾರ ಬದ್ಧ. ಆಧಾರ್ ಲಿಂಕ್ ಮಾಡುವುದರಲ್ಲಿ ಕರ್ನಾಟಕ ನಂಬರ್ ಒನ್ ಇದೆ ಎಂದು ಇದೇ ವೇಳೆ ಕೃಷಿ ಸಚಿವರು ತಿಳಿಸಿದರು.